*ಮುಂಬೈ:* ವಾಣಿಜ್ಯ ನಗರಿ ಮುಂಬೈನಲ್ಲಿ ವಾಸಿಸಲು ಮರಾಠಿ ತಿಳಿದಿರುವ ಅಗತ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಭಯ್ಯಾಜಿ ಜೋಶಿ ಹೇಳುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಮುಂಬೈಯಲ್ಲಿ ಕೇವಲ ಒಂದು ಭಾಷೆಯಿಲ್ಲ. ಅನೇಕ ಭಾಷೆಗಳಿವೆ. ಕೆಲವೊಂದು ಪ್ರದೇಶದಲ್ಲಿ ಅವರ ಸ್ವಂತ ಭಾಷೆಗಳನ್ನು ಜನ ಮಾತನಾಡುತ್ತಾರೆ. ಘಾಟ್ಕೋಪರ್ನ ಭಾಷೆ ಗುಜರಾತಿ ಎಂದು ಅವರು ಹೇಳಿದ್ದಾರೆ. ಗಿರ್ಗಾಂವ್ನಲ್ಲಿ, ಕಡಿಮೆ ಹಿಂದಿ ಮಾತನಾಡುವ ಮತ್ತು ಹೆಚ್ಚು ಮರಾಠಿ ಮಾತನಾಡುವವರಿದ್ದಾರೆ. ಆದ್ದರಿಂದ ಮುಂಬೈಗೆ ಬರುವ ಯಾವುದೇ ವ್ಯಕ್ತಿ ಮರಾಠಿ ಕಲಿಯುವ ಅಗತ್ಯವಿಲ್ಲ ಎಂದು ಜೋಶಿ ಹೇಳಿದ್ದಾರೆ.
ಆದರೆ ಮರಾಠಿ ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆಯಾಗಿದ್ದು, ಇಲ್ಲಿ ವಾಸಿಸುವ ಯಾರೇ ಆದರೂ ಮರಾಠಿ ಕಲಿಯಬೇಕು ಮತ್ತು ಮಾತನಾಡಬೇಕು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರತಿಪಾದಿಸಿದ್ದಾರೆ.ಈ ಕುರಿತು ಸರ್ಕಾರ ತನ್ನ ನಿಲುವು ಸ್ಪಷ್ಪಪಡಿಸಬೇಕು ಎಂಬ ಶಿವಸೇನೆ-ಯುಬಿಟಿ ಶಾಸಕ ಭಾಸ್ಕರ್ ಜಾಧವ್ ಹೇಳಿಕೆಗೆ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಫಡ್ನವಿಸ್, "ಭಯ್ಯಾಜಿ ಹೇಳಿದ್ದನ್ನು ನಾನು ಕೇಳಿಲ್ಲ, ಆದರೆ ಮುಂಬೈ ಮತ್ತು ಮಹಾರಾಷ್ಟ್ರದ ಭಾಷೆ ಮರಾಠಿ ಆಗಿದ್ದು, ಪ್ರತಿಯೊಬ್ಬರು ಮರಾಠಿ ಕಲಿಯಬೇಕು ಮತ್ತು ಮಾತನಾಡಬೇಕು ಎಂದು ಹೇಳಿದರು.ಇದಕ್ಕೂ ಮುನ್ನಾ ಮಾತನಾಡಿದ ಶಿವಸೇನಾ -ಯುಬಿಟಿ ಸಂಸದ ಸಂಜಯ್ ರಾವತ್, ಮರಾಠಿ ನಮ್ಮ ರಾಜ್ಯ ಭಾಷೆ ಮತ್ತು ಅಂತಹ ಹೇಳಿಕೆಯು ದೇಶದ್ರೋಹಕ್ಕೆ ಸಮಾನವಾಗಿದೆ. ಇದು ಮರಾಠಿ ಭಾಷೆ ಮತ್ತು ಮರಾಠಿ ಹೆಮ್ಮೆಗೆ ಮಾಡಿದ ಅವಮಾನವಲ್ಲವೇ? ಎಂದು ಪ್ರಶ್ನಿಸಿದರು.
ಯೋಗೇಶ್ ಶಿರೂರು
0 Comments