ಜ್ಞಾನವೇ ಎಲ್ಲದಕ್ಕಿಂತಲೂ ಮಿಗಿಲಾದ ಐಶ್ವರ್ಯಾ ಎಂಬ ಮಾತಿದೆ. ಕೇವಲ ಜ್ಞಾನದಿಂದಲೇ ಬಡ ಕಾರ್ಮಿಕನ ಮಗನೊಬ್ಬ ಈಗ ಬರೋಬ್ಬರಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ. ತನ್ನ ಕುಟುಂಬಕ್ಕೆ ಆಧಾರವಾಗಿದ್ದಾನೆ. ಬಡ ವೆಲ್ಡರ್ ಕಾರ್ಮಿಕನ ಮಗನೊಬ್ಬ ಭಾರತದ ಜನಪ್ರಿಯ ಟಿವಿ ರಿಯಾಲಿಟಿ ಶೋ ಕೌನ್ ಬನೇಗಾ ಕರೋಡ್ಪತಿಯಲ್ಲಿ ಬರೋಬ್ಬರಿ 50 ಲಕ್ಷ ರೂಪಾಯಿ ಗೆದ್ದಿದ್ದಾನೆ. ಅಷ್ಟಕ್ಕೂ ಈ ಯುವಕ ಬೇರೆ ಯಾವುದೋ ರಾಜ್ಯದವನಲ್ಲ. ನಮ್ಮದೇ ಕರ್ನಾಟಕದ ಬಾಗಲಕೋಟೆಯವನು. ಬಾಗಲಕೋಟೆಯ ರಬಕವಿಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಯುವಕ ರಮ್ಜಾನ್ ಮಲಿಕ್ ಬಾಬ್ ಫೀರಜಾದೆ, ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಡೆಸಿಕೊಡುವ ಬಲು ಜನಪ್ರಿಯ ಟಿವಿ ಶೋ ಕೌನ್ ಬನೇಗಾ ಕರೋಡ್ಪತಿಯಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದ ಕೊನೆಯ ಹಂತದ ವರೆಗೆ ಏರಿದ ಅವರು ಒಂದರ ಮೇಲೊಂದು ಪ್ರಶ್ನೆಗಳಿಗೆ ಉತ್ತರ ನೀಡುತ್ತಾ, 50 ಲಕ್ಷ ರೂಪಾಯಿ ಗೆದ್ದು ಬಂದಿದ್ದಾರೆ. ಯುವಕ ರಮ್ಜಾನ್ ಮಲ್ಲಿಕ್ ಅವರ ತಂದೆ ಮಹಾಲಿಂಗಪುರದಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಾರೆ. ರಮ್ಜಾನ್ ಸಹ ತಂದೆಗೆ ಸಹಾಯ ಮಾಡುತ್ತಿದ್ದರು. ಬಡ ಕುಟುಂಬವಾದ್ದರಿಂದ ಕುಟುಂಬಕ್ಕೆ ಸಹಾಯ ಮಾಡಲು ಚಹಾ ಅಂಗಡಿಯಲ್ಲಿ ಲೊಟ ತೊಳೆಯುವ ಕೆಲಸ. ಬ್ಯಾಡ್ಮಿಂಟನ್ ಕೋರ್ಟ್ನ ವಾಚ್ಮ್ಯಾನ್ ಹೀಗೆ ಹಲವು ರೀತಿಯ ಚಿಕ್ಕ ಪುಟ್ಟ ಕೆಲಸ ಮಾಡುತ್ತಾ ಬಿಎ ಮುಗಿಸಿದ್ದಾರೆ. ಇದೀಗ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಹೀಗಿರುವಾಗ ಕೌನ್ ಬನೇಗಾ ಕರೋಡ್ಪತಿಗೆ ಅರ್ಜಿ ಹಾಕಿದ್ದ ರಮ್ಜಾನ್ಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರಕಿದೆ.
0 Comments