ಭಾರತವನ್ನು ಎರಡೆರಡು ಮಾದರಿಗಳಲ್ಲಿ ವಿಶ್ವ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 2000 ನೇ ಇಸವಿಯಲ್ಲಿ ಭಾರತ ಕ್ರಿಕೆಟ್ಗೆ ಕಾಲಿಟ್ಟಿದ್ದ ಯುವಿ 2007 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಹಾಗೂ 2011 ರಲ್ಲಿ ನಡೆದಿದ್ದ ಏಕದಿನ ವಿಶ್ವಕಪ್ ಅನ್ನು ಟೀಂ ಇಂಡಿಯಾ ಗೆದ್ದುಕೊಳ್ಳುವಲ್ಲಿ ಸಾಕಷ್ಟು ಕೊಡುಗೆ ನೀಡಿದ್ದರು. ಈ ಎರಡು ವಿಶ್ವಕಪ್ಗಳಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡಲ್ಲೂ ಯುವಿ ಅಮೋಘ ಪ್ರದರ್ಶನ ನೀಡಿದ್ದರು. ಅದರಲ್ಲೂ ಬ್ಯಾಟಿಂಗ್ನಲ್ಲಿ ಸುನಾಮಿಯನ್ನೇ ಎಬ್ಬಿಸಿದ್ದ ಯುವಿ ರನ್ಗಳ ಗುಡ್ಡೆ ಹಾಕಿದ್ದರು. ಆದಾಗ್ಯೂ ಕೇವಲ 3 ವರ್ಷಗಳ ನಂತರ ನಡೆದಿದ್ದ ಟಿ20 ವಿಶ್ವಕಪ್ನಲ್ಲಿ ತಮ್ಮ ಆಮೆಗತಿಯ ಬ್ಯಾಟಿಂಗ್ನಿಂದಾಗಿ ತಂಡದ ಸೋಲಿಗೆ ಯುವಿ ಕಾರಣರಾಗಿದ್ದರು. ಇದರಿಂದಾಗಿ ಅವರ ಮನೆಯ ಮೇಲೆ ಅಭಿಮಾನಿಗಳು ಕಲ್ಲು ತೂರಾಟ ಕೂಡ ನಡೆಸಿದ್ದರು. ವಾಸ್ತವವಾಗಿ ಕ್ರಿಕೆಟ್ ಲೋಕದಲ್ಲಿ ಯುವರಾಜ್ ಸಿಂಗ್ ಅವರನ್ನು ಸಿಕ್ಸರ್ ಕಿಂಗ್ ಎಂದು ಕರೆಯಲಾಗುತ್ತದೆ. 6 ಎಸೆತಗಳಲ್ಲಿ 6 ಸಿಕ್ಸರ್ ಬಾರಿಸಿದ ವಿಶ್ವದಾಖಲೆ ಅವರ ಹೆಸರಿನಲ್ಲಿದೆ. ಅಲ್ಲದೆ ಅವರು ಕೇವಲ 12 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ದಾಖಲೆಯನ್ನೂ ನಿರ್ಮಿಸಿದ್ದಾರೆ. ಆದರೆ ಏಪ್ರಿಲ್ 6, 2014 ರ ರಾತ್ರಿ, ಬಹುಶಃ ಯುವರಾಜ್ ಸಿಂಗ್ ಅವರ ವೃತ್ತಿಜೀವನದ ಕೆಟ್ಟ ದಿನವಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಅಂದು ಮೀರ್ಪುರದ ಮೈದಾನದಲ್ಲಿ ಭಾರತ ಮತ್ತು ಶ್ರೀಲಂಕಾ ನಡುವೆ ಟಿ20 ವಿಶ್ವಕಪ್ನ ಫೈನಲ್ ಪಂದ್ಯ ನಡೆದಿತ್ತು. ಇದೇ ಪಂದ್ಯದಲ್ಲಿ ಯುವರಾಜ್ ಸಿಂಗ್ ತಮ್ಮ ಆಮೆಗತಿಯ ಬ್ಯಾಟಿಂಗ್ನಿಂದಾಗಿ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಟಿ20 ಮಾದರಿಯಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೈಯುತ್ತಿದ್ದ ಯುವರಾಜ್ ಸಿಂಗ್ ಅಂದು ಶ್ರೀಲಂಕಾ ವಿರುದ್ಧ ನಡೆದಿದ್ದ ಫೈನಲ್ ಪಂದ್ಯದಲ್ಲಿ ಮಾತ್ರ ಬರೋಬ್ಬರಿ 21 ಎಸೆತಗಳನ್ನು ಆಡಿ 52.38 ರ ಸ್ಟ್ರೈಕ್ ರೇಟ್ನಲ್ಲಿ ಕೇವಲ 11 ರನ್ ಗಳಿಸಿದ್ದರು. ಅಚ್ಚರಿಯೆಂದರೆ ಈ ಪಂದ್ಯದಲ್ಲಿ 11 ನೇ ಓವರ್ನಲ್ಲೇ ಕ್ರೀಸ್ಗೆ ಬಂದ ಯುವಿ, ಅಂತಿಮವಾಗಿ 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು. ಈ ನಡುವೆ 21 ಎಸೆತಗಳನ್ನಾಡಿದ ಯುವಿ ಬರೋಬ್ಬರಿ 9 ಡಾಟ್ ಬಾಲ್ಗಳನ್ನು ಆಡಿದ್ದರು.
0 Comments