*ನವದೆಹಲಿ:* ಗಗನಯಾನ, ಚಂದ್ರಯಾನ ಹೀಗೆ ಆಗಸದ ಶೋಧದಲ್ಲಿ ಪಳಗುತ್ತಿರುವ ಭಾರತ ಈಗ ಸಮುದ್ರಯಾನ ಕೈಗೊಳ್ಳುತ್ತಿದೆ. ಸಾಗರದೊಳಗೆ 6,000 ಮೀಟರ್ (ಆರು ಕಿಲೋಮಿಟರ್) ಆಳಕ್ಕೆ ಮನುಷ್ಯರನ್ನೊಳಗೊಂಡ ನೌಕೆಯನ್ನು ಕಳುಹಿಸಲು ಹೊರಟಿದೆ. ಇದು ಭಾರತದ ಮೊದಲ ಮಾನವ ಸಹಿತ ಸಾಗರದಾಳ ಅನ್ವೇಷಣೆ ಯೋಜನೆ ಎನಿಸಿದೆ. 2026ರ ಕೊನೆಯಲ್ಲಿ ಇದು ಆರಂಭವಾಗಬಹುದು ಎಂದು ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ಬಾಲಾಜಿ ರಾಮಕೃಷ್ಣನ್ ಹೇಳಿದ್ದಾರೆ. ನೀರೊಳಗೆ ಸಾಗಬಲ್ಲ ಮತ್ಸ್ಯ ಹೆಸರಿನ ನೌಕೆಯು ಸಾಗರದ 6 ಕಿಮೀ ಆಳದವರೆಗೂ ಅನ್ವೇಷಿಸಲಿದೆ. ಇದರಲ್ಲಿ ಮೂವರು ವಿಜ್ಞಾನಿಗಳು ಇರಲಿದ್ದಾರೆ. ಹೊಸ ತಲೆಮಾರಿನ ಈ ನೌಕೆಯನ್ನು ದೇಶೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಇದು 25 ಟನ್ ಭಾರದ್ದಾಗಿದ್ದು ಹೆಚ್ಚಿನ ಭಾಗವನ್ನು ಟೈಟೇನಿಯಂ ಲೋಹದಿಂದ ಮಾಡಲಾಗಿದೆ. ಆರು ಕಿಮೀ ನೀರಿನಾಳದಲ್ಲಿ ವಿಪರೀತ ಒತ್ತಡ ಇರುತ್ತದೆ. ಸಿಕ್ಕಾಪಟ್ಟೆ ಶೀತ ಇರುತ್ತದೆ. ಇದನ್ನು ತಡೆದುಕೊಳ್ಳಬಲ್ಲಷ್ಟು ಶಕ್ತಿಯುತವಾಗಿರುವಂತೆ ನೌಕೆಯನ್ನು ನಿರ್ಮಿಸಲಾಗಿದೆ.ಮನುಷ್ಯ ಸಮೀಪದ ಗ್ರಹಗಳವರೆಗೂ ಹೋಗಿ ಬಂದಿದ್ದಾನೆ. ದೂರ ದೂರದ ಗೆಲಾಕ್ಸಿಗಳನ್ನು ದುರ್ಬೀನು ಹಾಕಿಕೊಂಡು ನೋಡುತ್ತಾನೆ. ಆದರೆ, ಭೂಮಿಯ ಗರ್ಭದಲ್ಲಿ ಏನಿದೆ ಎಂದು ಸಂಪೂರ್ಣವಾಗಿ ತಿಳಿಯಲು ಆಗಿಲ್ಲ. ಈಗಲೂ ಕೂಡ ಅಲ್ಲಲ್ಲಿ ಆಳ ಸಮುದ್ರ ಅನ್ವೇಷಣೆ ನಡೆಯುತ್ತಲೇ ಇದೆ. ಭಾರತವು ಮಂಗಳಯಾನದಲ್ಲಿ ನೀರಿನ ಸುಳಿವು ಪತ್ತೆ ಮಾಡಿದಂತೆ ಸಮುದ್ರಯಾನದಲ್ಲೂ ಹೊಸ ಸಂಪನ್ಮೂಲಗಳನ್ನು ಪತ್ತೆ ಮಾಡಬಲ್ಲುದಾ ಎನ್ನುವ ಕುತೂಹಲ ಇದೆ. 6,000 ಮೀಟರ್ ಆಳಕ್ಕೆ ಒಮ್ಮೆಗೇ ಇಳಿಯಲಾಗುವುದಿಲ್ಲ. ಹಂತ ಹಂತವಾಗಿ ಆ ಮಟ್ಟಕ್ಕೆ ಹೋಗಲಿದೆ. ಮೊದಲಿಗೆ 500 ಮೀಟರ್ ಆಳಕ್ಕೆ ಇಳಿಯುವ ಪ್ರಯೋಗ ನಡೆಯಲಿದೆ ಎಂದು ರಾಮಕೃಷ್ಣನ್ ಹೇಳುತ್ತಾರೆ.
0 Comments