*ಮಂಗಳೂರು:* ತಾಜ್ಮಹಲ್ ಮಾದರಿಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಉಳ್ಳಾಲದಲ್ಲಿ ಮಸೀದಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿರುವ ಕುರಿತು ವರದಿಯಾಗಿದೆ. ಸಂಪೂರ್ಣ ಅಮೃತಶಿಲೆಯಿಂದ ತಯಾರಾಗುವ ಜೊತೆಗೆ ಮುಂಭಾಗದಲ್ಲಿ ವಿಶಾಲ ನೀರಿನ ಕೊಳ ಇರಲಿದೆ. ಉಳ್ಳಾಲದಲ್ಲಿ ಪ್ರಸ್ತುತ ಇರುವ ಇತಿಹಾಸ ಪ್ರಸಿದ್ಧ ಜಮಾ ಮಸೀದಿಯನ್ನು ತೆರವು ಮಾಡಿ ಅದೇ ಜಾಗದಲ್ಲಿ 50ಕೋಟಿ ರೂ. ವೆಚ್ಚದಲ್ಲಿ ಹೊಸ ಮಸೀದಿ ನಿರ್ಮಾಣವಾಗಲಿದೆ. ಯೋಜನೆವರದಿ ಸಿದ್ಧ ಮಾಡಲಾಗಿದ್ದು, ಶೀಘ್ರ ನಿರ್ಮಾಣ ಆರಂಭವಾಗಲಿದೆ.ಈಗಾಗಲೇ ನೀಲ ನಕ್ಷೆಯನ್ನು ದುಬೈ, ಗೋವಾ, ಆಂಧ್ರಪ್ರದೇಶ, ಕರ್ನಾಟಕದ ವಾಸ್ತು ಶಿಲ್ಪಿಗಳು ಸಿದ್ಧಮಾಡಿದ್ದಾರೆ 8 ಮಿನಾರ್, 6 ಗುಂಬಜ್, 5 ಕಡೆ ಪ್ರವೇಶ ದ್ವಾರಗಳನ್ನು ಮಸೀದಿ ಒಳಗೊಂಡಿದೆ. ನೆಲ ಹಾಗೂ ಮೊದಲ ಮಹಡಿ 14 ಅಡಿ ಎತ್ತರವಿದ್ದು, ಎರಡನೇ ಅಂತಸ್ತು 13 ಅಡಿ ಸೇರಿ ಒಟ್ಟು 40 ಅಡಿ ಎತ್ತರವಿರಲಿದೆ ಎಂದು ಆಡಳಿತ ಸಮಿತಿ ತಿಳಿಸಿದ್ದಾರೆ ಎಂದು ವರದಿಯಾಗಿದೆ. ನೆಲ ಹಾಗೂ ಎರಡು ಅಂತಸ್ತಿನಲ್ಲಿ ಪ್ರಾರ್ಥನೆಗೆ ಜಾಗ ಇರಲಿದೆ. ನೆಲ ಮಹಡಿಯಲ್ಲಿ ಧರ್ಮಗುರುಗಳ ಪ್ರವಚನಕ್ಕೂ ಸ್ಥಳಾವಕಾಶ ಕಲ್ಪಿಸುವ ವ್ಯವಸ್ಥೆ ಇರಲಿದೆ ಎಂದು ವರದಿಯಾಗಿದೆ. ಹಾಗೂ ಗೋಡೆಗಳಿಗೆ ಪೈಂಟಿಂಗ್ಗೆ ಬದಲಾಗಿ ಒಳಾಂಗಣ ಹಾಗೂ ಹೊರಾಂಗಣಕ್ಕೆ ಅಮೃತಶಿಲೆಯನ್ನು ಬಳಸಲಾಗುವುದು. ರಾಸಾಯನಿಕವಿಲ್ಲದೇ ನೈಸರ್ಗಿಕವಾಗಿ ನಿರ್ಮಿಸುವ ಯೋಜನೆ ಇದಾಗಿದೆ. ಮುಂಭಾಗದಲ್ಲಿ 40 ಅಡಿ ಅಗಲ, 70 ಅಡಿ ಉದ್ದು, ಒಂದೂವರೆ ಅಡಿ ಆಳದ ಕೊಳ ನಿರ್ಮಾಣವಾಗಲಿದೆ. ಈ ಮಸೀದಿಯಲ್ಲಿ ಏಕಕಾಲದಲ್ಲಿ 10 ಸಾವಿರ ಜನ ಪ್ರಾರ್ಥಿಸುವ ಸ್ಥಳಾವಕಾಶವನ್ನು ಹೊಂದಿರಲಿದೆ.
ಯೋಗೇಶ್ ಶಿರೂರು
0 Comments