*ಮಂಗಳೂರು :* ಸ್ಮಾರ್ಟ್ ಸಿಟಿ ಯೋಜನೆಯನ್ವಯ ಮಂಗಳೂರಿನ ಪಡೀಲಿನಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಳೆದ ಶುಕ್ರವಾರ ಪ್ರಜಾಸೌಧ ಎಂಬ ಹೆಸರಿನಿಂದ ಉದ್ಘಾಟನೆ ಗೊಂಡು ಲೋಕಾರ್ಪಣೆ ಗೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಉದ್ಘಾಟನೆಗೊಂಡ ಈ ಪ್ರಜಾಸೌಧದಲ್ಲಿ ಇನ್ನು ಮುಂದೆ ಒಟ್ಟು 28ಕ್ಕೂ ಸರ್ಕಾರಿ ಇಲಾಖೆಗಳು ಕಾರ್ಯನಿರ್ವಹಿಸಲಿದೆ. ಆದರೆ ಸುಮಾರು 400 ವರ್ಷಗಳಿಗಿಂತಲೂ ಹೆಚ್ಚಿನ ಇತಿಹಾಸ ಹೊಂದಿ ದಕ ಜಿಲ್ಲೆಯ ಕೆಂಪುಕೋಟೆ ಎಂದೇ ಕರೆಯಿಸಿಕೊಂಡು ಈವರೆಗೂ ದಕ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಾಗಿ, ಟ್ರಜರರಿಯಾ ಗಿ, ಜಿಲ್ಲಾ ದಾಖಲಾತಿಗಳ ಖಜಾನೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ಟೇಟ್ ಬ್ಯಾಂಕ್ ವೃತ್ತದ ಬಳಿಯಿದ್ದ ಹಳೆಯ ಜಿಲ್ಲಾಧಿಕಾರಿ ಇನ್ನು ಮುಂದೆ ಇತಿಹಾಸದ ಗತ ಸಾರುವ ಹಳೆಯ ಸ್ಮಾರಕವಾಗಿ ಮಾತ್ರ ಉಳಿಯಲಿದೆ. ಸುಮಾರು 400 ವರ್ಷಗಳಿಗೂ ಮಿಕ್ಕಿದ ಇತಿಹಾಸ ಹೊಂದಿರುವ ಈ ಹಳೆಯ ಜಿಲ್ಲಾಧಿಕಾರಿ ಕಟ್ಟಡ ಪೋರ್ಚುಗೀಸರಿಂದ ಹಿಡಿದು ಅನೇಕ ಅರಸರ ಹಾಗೂ ಬ್ರಿಟಿಷರ ಕತೆ, ಸಾಹಸಗಾಥೆಯನ್ನು ಸಾರಿ ಸಾರಿ ಹೇಳುತ್ತಿವೆ. ಮೊಟ್ಟಮೊದಲು ವಿಜಯನಗರ ಅರಸರ ಕಾಲದಲ್ಲಿ ವಿಜಯನಗರ ಅರಸರ ಸಾಮಂತರಾಗಿ ತುಳುನಾಡಿನಲ್ಲಿ ಆಳ್ವಿಕೆ ಮಾಡಿಕೊಂಡಿದ್ದ ಬಂಗರಸರ ಅರಮನೆಯಾಗಿ, ಆಡಳಿತ ಕೇಂದ್ರವಾಗಿ ಕಟ್ಟಲ್ಪಟ್ಟಿದ್ದ ಈ ಅರಮನೆ ಆಳ್ವಿಕೆ ಪೋರ್ಚುಗೀಸರ ಅವಧಿಯಲ್ಲಿ ಪೋರ್ಚುಗೀಸ್ ಆಡಳಿತದ ಕೇಂದ್ರ ಕಚೇರಿಯಾಗಿ ಮಾರ್ಪಾಡಾಯಿತು. ಆನಂತರ ಬ್ರಿಟಿಷರ ಕಾಲದಲ್ಲಿ ಬ್ರಿಟಿಷರ ಜಿಲ್ಲಾ ಕಲೆಕ್ಟರ್ ಕಚೇರಿಯಾಗಿ, ಜಿಲ್ಲಾ ಟ್ರಜರರಿಯಾಗಿ, ಜಿಲ್ಲಾ ದಾಖಲೆಗಳ ಖಜಾನೆಯಾಗಿ ವಿಶೇಷ ವಿನ್ಯಾಸದ ಆಗಿನ ಕಾಲದ ಅತಿ ದೊಡ್ಡ ಕಟ್ಟಡವುಳ್ಳ ಕಚೇರಿಯಾಗಿ ರಚಿಸಲ್ಪಟ್ಟಿತು. ಬಳಿಕ 1784ರಲ್ಲಿ ಬ್ರಿಟಿಷರನ್ನು ಸೋಲಿಸಿದ ಟಿಪ್ಪು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡು ಬ್ರಿಟಿಷರು ಹೊಸದಾಗಿ ನಿರ್ಮಿಸಿದ್ದ ಈ ಜಿಲ್ಲಾ ಕಲೆಕ್ಟರ್ ಕಚೇರಿಯನ್ನು ತನ್ನ ಅರಮನೆಯನ್ನಾಗಿ ಮಾಡಿಕೊಂಡ. ನಂತರ ಟಿಪ್ಪುವಿನ ಮರಣಾನಂತರ 8/7/1799ರಲ್ಲಿ ಬ್ರಿಟಿಷರು ಮತ್ತೆ ಈ ಅರಮನೆಯನ್ನು ತಮ್ಮ ವಶಕ್ಕೆ ಪಡೆದುಕೊಂಡು ಮತ್ತೆ ಜಿಲ್ಲಾ ಕಲೆಕ್ಟರ್ ಕಚೇರಿಯನ್ನಾಗಿ ಕರ್ತವ್ಯಕ್ಕೆ ತೊಡಗಿಸಿಕೊಂಡು ಮೊದಲು ಮೇಜರ್ ತೋಮಸ್ ಮೆನ್ರೋ ರನ್ನು ಜಿಲ್ಲಾ ಕಲೆಕ್ಟರ್ ರನ್ನಾಗಿ ನೇಮಿಸಿದರು. ನಂತರ ಇದೇ ಕಚೇರಿಯಲ್ಲೇ ಸುಮಾರು 200 ವರ್ಷಗಳ ಕಾಲ ಬ್ರಿಟಿಷರು ಸುಧೀರ್ಘ ಅಧಿಕಾರ ಮತ್ತು ಆಡಳಿತವನ್ನು ನಡೆಸತೊಡಗಿದರು.
ಈ ಕಟ್ಟಡ ಆಗಿನ ಕಾಲದ ವಿಶೇಷ ತಂತ್ರಜ್ಞಾನದಿಂದ ಕಟ್ಟಲ್ಪಟ್ಟು ಆಗಿನ ಕಾಲದ ಬಹುದೊಡ್ಡ ಕಟ್ಟಡವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ವಿಶೇಷವೇನೆಂದರೆ ಈ ಕಟ್ಟಡಕ್ಕೆ ಯಾವುದೇ ರೀತಿಯಲ್ಲೂ ಕಾಂಕ್ರೀಟ್ ಬಳಕೆ ಮಾಡದೆ ಕೇವಲ ಸುಣ್ಣ ಮಿಶ್ರಿತ ಪ್ಲಾಸ್ಟರಿಂಗ್ ಮತ್ತು ಸುಣ್ಣದ ಮಾರ್ಟರ್ ನ್ನು ಮಾತ್ರ ಬಳಸಿ ದೀರ್ಘ ವರ್ಷಗಳ ಕಾಲ ಬಾಳಿಕೆ ಬರುವಂತೆ ವಿಶೇಷವಾಗಿ ನಿರ್ಮಿಸಿರುವುದು ಆಗಿನ ಕಾಲದ ತಾಂತ್ರಿಕತೆಯ ವೈಶಿಷ್ಟ್ಯವನ್ನು ಸಾಬೀತುಪಡಿಸುತ್ತದೆ. ಸುಮಾರು ಎಂಟು ಫೀಟು ಅಡಿ ಆಳದ ಕಲ್ಲಿನ ಫೌಂಡೇಶನ್ ನಲ್ಲಿ ,ಒಂದುವರೆ ಫೀಟು ಅಗಲದ ಗೋಡೆ ಯನ್ನು ಸುಣ್ಣದ ಪ್ಲಾಸ್ಮಿರಿಂಗ್ ಮತ್ತು ಮಾರ್ಟರ್ನಲ್ಲಿ ಕಟ್ಟಲಾಗಿದೆ. ಅಲ್ಲದೆ ಕೇವಲ ಮೇಸ್ಸರ್ನಿ ಮಾತ್ರ ಇರುವ ಈ ಕಟ್ಟಡಕ್ಕೆ ಎಲ್ಲಿಯೂ ಆರ್ ಸಿ ಸಿ ಪಿಲ್ಲರ್ ಇಲ್ಲದಿರುವುದು ಬಹಳ ವಿಶೇಷವೆನಿಸಿದೆ. ಈ ಕಟ್ಟಡಕ್ಕೆ ವಿಶೇಷ ರೀತಿಯ ಕಮಾನುಗಳಿದ್ದು ಈ ಕ್ರಮಾನುಗಳಿಗೆ ಯಾವುದೇ ರೀತಿಯ ಲಿಂಕ್ಟಲನ್ನೂ ಬಳಕೆ ಮಾಡದೆ, ಕಾಂಕ್ರೀಟನ್ನೂ ಬಳಕೆ ಮಾಡದೆ ವಿಶೇಷ ರೀತಿಯಿಂದ ಕಟ್ಟಲ್ಪಟ್ಟಿರುವುದು ಆಗಿನ ಕಾಲದ ಕಟ್ಟಡ ರಚನೆಯ ಇಂಜಿನಿಯರ್ ಗಳ ಚಾಣಾಕ್ಷತೆಯನ್ನು ತೋರ್ಪಡಿಸುತ್ತದೆ.
ಅದಕ್ಕಿಂತಲೂ ಮುಖ್ಯವಾಗಿ ಮರದಿಂದಲೇ ನಿರ್ಮಿಸಲಾಗಿರುವ ಬಹಳ ಎತ್ತರದ ಮಾಡು ಕೂಡ ಮರದ ಫ್ಲೋರಿಂಗ್ ನಿಂದಲೇ ಮಾಡಲ್ಪಟ್ಟಿದೆ.ಈ ಮಾಡಿಗೆ ವಿವಿಧ ರೀತಿಯ ಟಿಂಬರ್ ಟ್ರಸ್ ಗಳನ್ನು ಕೂಡ ಮರದಿಂದಲೇ ಮಾಡಲಾಗಿದ್ದು ಟಿಂಬರ್ ಟ್ರಸ್ ಗಳನ್ನೇ ಬಳಸಿ ಹಂಚಿನ ಮಾಡನ್ನು ನಿರ್ಮಿಸಲಾಗಿದೆ. ಈ ಮಾಡಿ ಗೆ ಮೂರು ರೀತಿಯ ಕವರ್ ಗಳಿದ್ದು ಕೆಳಗಿನದ್ದು ಪ್ಲೈನ್ ಹಲಗೆ, ಅದರ ಮೇಲಿನದ್ದು ಸೀಲಿಂಗ್ ಟೈಪ್ ನ ಹಲಗೆ, ನಂತರ ಅದರ ಮೇಲೆ ಹೆಂಚನ್ನು ಹೊದಿಸಲಾಗಿರುತ್ತದೆ. ಎಂತಹಾ ಮಳೆ, ಚಳಿ, ಬೇಸಿಗೆ ಕಾಲದಲ್ಲೂ ಕೂಡ ವಿದ್ಯುತ್ತಿನ ಬಳಕೆ ಇಲ್ಲದೆಯೇ ಈ ಕೋಣೆಗಳೆಲ್ಲವೂ ಹವಾನಿಯಂತ್ರಿತ ಕೊಠಡಿಯಂತೆ ಕಾರ್ಯನಿರ್ವಹಿಸುವ ವಿಶೇಷ ತಂತ್ರಗಾರಿಕೆಯ ರಚನೆ ಅದಾಗಿತ್ತು.ಪೋರ್ಚುಗೀಸರ ಕಾಲದಲ್ಲಿ ಮೊಟ್ಟಮೊದಲು ಪೋರ್ಚುಗೀಸರ ಕಾಲದ ಟ್ರೆಜರರಿಯಾಗಿ, ವಿವಿಧ ದಾಖಲಾತಿ ಪತ್ರಗಳನ್ನು ಸಂಗ್ರಹಿಸಿಡಲು ಬಳಕೆಯಾಗುತ್ತಿದ್ದ ಈ ಕಟ್ಟಡ ನಂತರ ಬ್ರಿಟಿಷರ ಕಾಲದಲ್ಲಿ ಮೊತ್ತಮೊದಲು ಜಿಲ್ಲಾ ಕಲೆಕ್ಟರ್ ಕಚೇರಿಯಾಗಿ, ಟ್ರಜರರಿಯಾಗಿ ನೋಟು ಮತ್ತು ಕರೆನ್ಸಿಗಳನ್ನು ಸಂಗ್ರಹಿಸಲು ಮತ್ತು ವಿವಿಧ ದಾಖಲಾತಿಗಳನ್ನು ಸಂಗ್ರಹಿಸಿದಲು ಈ ಕಚೇರಿಯನ್ನು ಬಳಸಲಾಗುತ್ತಿತ್ತು.
ಇಲ್ಲಿನ ಗೋಡೆಗಳಲ್ಲಿ ಬರೆದಿರುವ ಇಸವಿಗಳೇ ಈ ಕಟ್ಟಡದ ಪ್ರಾಚೀನತೆಯನ್ನು ಸಾರಿ ಹೇಳುತ್ತಿವೆ. 1907ರಲ್ಲಿ ಇಲ್ಲಿನ ಟ್ರೆಜರಿರಿಯಲ್ಲಿ ಕೇವಲ ನೋಟಿನ ಕಟ್ಟುಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಮಾತ್ರ ಸಂಗ್ರಹಿಸಿಡಲಾಗುತ್ತಿತ್ತು. ಈ ಟ್ರಜರರಿ ಮತ್ತು ವಿಶೇಷ ದಾಖಲಾತಿಗಳ ಖಜಾನೆಯನ್ನು ಬಹಳ ವಿಶೇಷ ವಿನ್ಯಾಸಗಳಿಂದ ರಚಿಸಲಾಗಿದೆ. ಉದ್ದ ಅಗಲಕ್ಕೆ ಒಂದೇ ರೀತಿಯ ಮಾಡನ್ನು ನಿರ್ಮಿಸಲಾಗಿದ್ದರೂ ಈ ಮಾಡಿ ಗೆ ಕಬ್ಬಿಣದ ಟ್ರಸ್ ನ ಬದಲು ಯಾವುದೇ ಕಾಲಕ್ಕೂ ತುಕ್ಕು ಹಿಡಿಯದ ಮರದ ಟ್ರಸ್ ಗಳನ್ನೇ ಬಳಸಲಾಗಿದೆ. ಅದರಲ್ಲೂ ಮುಖ್ಯವಾಗಿ ರೆಕಾರ್ಡ್ ರೂಮ್ ಗಳನ್ನು ಮರದಿಂದಲೇ ಮಾಡಲಾಗಿದೆ. ಬಿಸಿಲು, ಗಾಳಿ, ಮಳೆಹನಿ, ಇಬ್ಬನಿಗಳ ಪಸೆ, ಇಲಿ, ಇರುವೆ ಜಿರಳೆ, ಹೆಗ್ಗಣಗಳೂ ಸಹಾ ಒಳ ನುಸುಳದಂತೆ, ಮರಗಳಿಂದಲೇ ಮಾಡಿರುವ ಈ ವಿಶೇಷ ರೀತಿಯ ವಿನ್ಯಾಸದಿಂದಾಗಿ ಈವರೆಗೂ ಇಲ್ಲಿನ ರೆಕಾರ್ಡ್ ರೂಂ ಗಳಿಗೆ ಯಾವುದೇ ಕೆಮಿಕಲನ್ನು ಬಳಸದೆ ಜಿಲ್ಲೆಯ ಹಲವು ವಿಭಾಗಗಳ ದಾಖಲಾತಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಒಂದಿಷ್ಟೂ ಮಸುಕಾಗದಂತೆ ಅತೀ ಜಾಗರೂಕತೆಯಿಂದ ಸಂಗ್ರಹಿಟ್ಟುಕೊಂಡು ಬರಲಾಗಿದೆ.
1947ರ ನಂತರ ಈ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೆ.ಎಫ್ ಸೌಂಡರ್ಸ್ ಎಂಬ ಹೆಸರಿನ ಜಿಲ್ಲಾಧಿಕಾರಿಯವರನ್ನು ಮೊದಲ್ಗೊಂಡು ಈ ವರೆಗೆ ಒಟ್ಟು ಸುಮಾರು 133 ಜಿಲ್ಲಾಧಿಕಾರಿಗಳು ಇಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ.
0 Comments