*ಬೆಂಗಳೂರು:* ನಮ್ಮ ಮೆಟ್ರೋ ದುಪ್ಪಟ್ಟು ದರ ಏರಿಕೆ ಮಾಡಿತ್ತು. ಜನಾಕ್ರೋಶ ಭುಗಿಲೆದ್ದ ಬಳಿಕ ಬಿಎಂಆರ್ಸಿಎಲ್ ಕೊಂಚ ಬೆಲೆ ಇಳಿಸಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು. ಆದ್ರೆ ಪ್ರಯಾಣಿಕರು ಮಾತ್ರ ಮೆಟ್ರೋದಿಂದ ಸ್ವಲ್ಪ ಸ್ವಲ್ಪವೇ ದೂರ ದೂರ ಉಳಿಯುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗುತ್ತಲೇ ಇದೆ. ಹೌದು…ಮೆಟ್ರೋ ಪ್ರಯಾಣ ದುಬಾರಿಯಾಗಿದ್ದರಿಂದ ಜನರು ಆರ್ಥಿಕ ಲೆಕ್ಕಾಚಾರದೊಂದಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಕೆಲವರು ಬಿಎಂಟಿಸಿ ಬಸ್ನತ್ತ ಮುಖ ಮಾಡುತ್ತಿದ್ದರೆ, ಇನ್ನೂ ಕೆಲವರು ಸ್ವಂತ ವಾಹನಗಳಲ್ಲಿ ಓಡಾಡಲು ಶುರು ಮಾಡಿದ್ದಾರೆ. ಹೀಗಾಗಿ ಮೆಟ್ರೋ ಪ್ರಯಾಣಿಕರಲ್ಲಿ ಕುಂಠಿತವಾಗಿದ್ದರೆ, ಟ್ರಾಫಿಕ್ ಸಮಸ್ಯೆ ಹೆಚ್ಚಳವಾಗುತ್ತಿದೆ. ಕಳೆದ ಸೋಮವಾರ 8 ಲಕ್ಷದ 28 ಸಾವಿರ ಮಂದಿ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದರು. ಮಾರನೇ ದಿನ ಅಂದ್ರೆ ಮಂಗಳವಾರ ಈ ಸಂಖ್ಯೆ 7 ಲಕ್ಷದ 78 ಸಾವಿರಕ್ಕೆ ಇಳಿಕೆಯಾಯ್ತು. ಇನ್ನು ಬುಧವಾರ 7 ಲಕ್ಷದ 62 ಸಾವಿರ ಮಂದಿ ಮೆಟ್ರೋದಲ್ಲಿ ಓಡಾಡಿದ್ರೆ ಗುರುವಾರ 7 ಲಕ್ಷದ 51 ಮಂದಿ ಪ್ರಯಾಣ ಬೆಳೆಸಿದ್ದಾರೆ. ಮೆಟ್ರೋದ ದರ ಏರಿಕೆಯ ಬಿಸಿ ಪ್ರಯಾಣಿಕರಿಗೆ ಮಾತ್ರವಲ್ಲ, ಟ್ರಾಫಿಕ್ಗೂ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಜನ ಮೆಟ್ರೋ ಹಾಗೂ ಖಾಸಗಿ ವಾಹನಗಳ ನಡುವಿನ ಖರ್ಚನ್ನು ತಾಳೆ ಹಾಕಿ ನೋಡುತ್ತಿದ್ದಾರೆ. ಹೀಗಾಗಿಯೇ ಸ್ವಂತ ವಾಹನಗಳ ಮೊರೆ ಹೋಗಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಬರೋಬ್ಬರಿ 1 ಕೋಟಿ 16 ಲಕ್ಷ ವಾಹನಗಳಿವೆ. ಸಿಟಿ ಮಂದಿ ಎಲ್ಲ ಖಾಸಗಿ ವಾಹನ ಬಳಸೋದಕ್ಕೆ ಶುರು ಮಾಡಿದ್ರೆ, ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಭಣಗೊಳ್ಳಲಿದೆ.
0 Comments