*ಬೆಂಗಳೂರು :* ಕರ್ನಾಟಕ ಬಿಜೆಪಿ ಘಟಕದ ಬಣ ರಾಜಕೀಯದ ಪ್ರತ್ಯಾರೋಪ/ಪ್ರತ್ಯಾರೋಪ ನಿರ್ಣಾಯಕ ಹಂತಕ್ಕೆ ಬಂದು ತಲುಪಿದೆ. ಮಧ್ಯ ಪ್ರವೇಶಿಸಲೇ ಬೇಕಾದ ಅನಿವಾರ್ಯತೆಗೆ ಬಿಜೆಪಿ ಹೈಕಮಾಂಡ್ ಸಿಲುಕಿರುವುದರಿಂದ, ರಾಜ್ಯ ಘಟಕದಲ್ಲಿ ಆಮೂಲಾಗ್ರ ಬದಲಾವಣೆಗೆ ತಂತ್ರಗಾರಿಕೆಯನ್ನು ರೂಪಿಸಿದೆ. ಈಗಾಗಲೇ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತಗೊಂಡಿದೆ. ಇದೇ ಸಮಯವನ್ನು ಬಳಸಿಕೊಂಡು, ಪ್ರಮುಖವಾಗಿ, ಎರಡು ಬಣಗಳ ನಡುವಿನ ಭಿನ್ನಮತಕ್ಕೆ ಶಾಸ್ವತ ಪರಿಹಾರ ಕಂಡುಕೊಳ್ಳಲು, ಮತ್ತೆರಡು ಪ್ರಮುಖ ವಿಷಯವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆದರೆ, ಸೋತ ಬಣಕ್ಕೆ ಹಿನ್ನಡೆಯಾಗುವುದು ಸಹಜ. ಅದಾದ ನಂತರ, ಮತ್ತೆ ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಎನ್ನುವ ಭೀತಿ, ಹೈಕಮಾಂಡಿಗೆ ಎದುರಾಗಿದೆ. ಹಾಗಾಗಿ, ಎರಡೂ ಬಣವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಿದೆ. ರಾಧಾ ಮೋಹನ್ ದಾಸ್ ಅಗರ್ವಾಲ್ ಅವರ ಉಸ್ತುವಾರಿ ರಾಜ್ಯ ಬಿಜೆಪಿ ಘಟಕದಲ್ಲಿ ಅಷ್ಟೇನೂ ಪರಿಣಾಮವನ್ನು ಬೀರುತ್ತಿಲ್ಲ. ಜೊತೆಗೆ, ಕೆಲವು ದಿನಗಳ ಹಿಂದಿನ ಅವರ ಭೇಟಿ, ರಾಜ್ಯ ಬಿಜೆಪಿಯಲ್ಲಿ ಇನ್ನಷ್ಟು ರಂಪ ರಾಮಾಯಣವಾಗಲು ಕಾರಣವಾಯಿತು. ಜೊತೆಗೆ, ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ, ಅವರನ್ನು ಬಹಿರಂಗವಾಗಿಯೇ ಪಕ್ಷಪಾತಿ ಎಂದು ದೂರಿದ್ದರು.
0 Comments