*ಬೆಂಗಳೂರು:* ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿರುವ ಖಾಸಗಿ ಬಡಾವಣೆಗಳಲ್ಲಿನ ಕಟ್ಟಡಗಳು, ನಿವೇಶನಗಳನ್ನು ಆಸ್ತಿ ತೆರಿಗೆ ಜಾಲದಡಿಗೆ ತಂದು 'ಬಿ-ಖಾತಾ' ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗಗಳಲ್ಲಿ ಭೂ ಪರಿವರ್ತನೆಯಾಗದ ಅಥವಾ ಬಡಾವಣೆ ಅನುಮೋದನೆಯಾಗದ ಆಸ್ತಿಗಳಿಂದ ತೆರಿಗೆ ಸಂಗ್ರಹಿಸುವ ಸಂಬಂಧ ಚರ್ಚೆ ನಡೆದಿದೆ. ಕ್ರಮಬದ್ಧವಲ್ಲದ ನಿವೇಶನ, ಕಟ್ಟಡಗಳನ್ನು ಸಕ್ರಮಗೊಳಿಸುವುದಿಲ್ಲ ಎಂಬ ಷರತ್ತಿಗೆ ಒಳಪಟ್ಟು ಈ ಆಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲು ಪ್ರಯತ್ನ ನಡೆದಿದೆ. ರಾಜ್ಯಾದ್ಯಂತ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈ ರೀತಿಯ 90 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು, ಒಂದು ಬಾರಿಯ ಪರಿಹಾರವಾಗಿ ಈ ಸೌಲಭ್ಯ ಕಲ್ಪಿಸಲು ಸರಕಾರ ಸಿದ್ಧತೆ ನಡೆಸಿದೆ. ಬಿಬಿಎಂಪಿ, ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಭೂಪರಿವರ್ತನೆಯಾದ ಪ್ರದೇಶಗಳಲ್ಲಿ ಅನಧಿಕೃತ ಬಡಾವಣೆಗಳು ದೊಡ್ಡ ಪ್ರಮಾಣದಲ್ಲಿ ನಿರ್ಮಾಣವಾಗಿವೆ. ನಿಯಮಬಾಹಿರವಾಗಿ ನಿರ್ಮಾಣಗೊಂಡಿರುವ ಈ ಸ್ಥಿರಾಸ್ತಿ, ಕಟ್ಟಡಗಳಿಗೆ 'ಎ' ಖಾತಾ ಸಿಗುವುದಿಲ್ಲ. ಆದರೆ ರಸ್ತೆ, ಕುಡಿಯುವ ನೀರು, ವಿದ್ಯುತ್ ಸಂಪರ್ಕ ಸೇರಿದಂತೆ ಇತರೆ ಮೂಲಸೌಕರ್ಯವನ್ನು 'ಬಿ- ಖಾತಾ' ಅಡಿ ನೋಂದಾಯಿಸಿ ಆಸ್ತಿ ತೆರಿಗೆ ಸಂಗ್ರಹಿಸುವ ಪ್ರಯತ್ನ ಬಿಬಿಎಂಪಿ ಸೇರಿದಂತೆ ಇತರೆ ಹಂತಗಳಲ್ಲಿ ನಡೆದಿದೆ. ಹಿಂದಿನ ಸರಕಾರದಲ್ಲಿ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆಯ ಸಂಪುಟ ಉಪಸಮಿತಿಯು ಈ ಬಗ್ಗೆ ಚರ್ಚಿಸಿದ್ದರೂ ಅಂತಿಮ ನಿರ್ಧಾರ ಕೈಗೊಂಡು ಜಾರಿಗೊಳಿಸಲು ಮುಂದಾಗಿರಲಿಲ್ಲ. ಸಚಿವ ಕೃಷ್ಣ ಬೈರೇಗೌಡ ಅವರು ಈಗಾಗಲೇ ಅಧಿಕಾರಿಗಳೊಂದಿಗೆ ಎರಡು- ಮೂರು ಸಭೆ ನಡೆಸಿದ್ದಾರೆ. ಪಂಚಾಯತ್ರಾಜ್ ಇಲಾಖೆಗೆ ಅಗತ್ಯವಿರುವ ಸ್ಪಷ್ಟೀಕರಣದ ಜತೆಗೆ ಸೂಕ್ತ ಅವಕಾಶ ಕಲ್ಪಿಸುವ ಬಗ್ಗೆ ಕಂದಾಯ ಇಲಾಖೆ ಸಕಾರಾತ್ಮಕವಾಗಿದೆ. ಅಂತಿಮವಾಗಿ ಪಂಚಾಯತ್ರಾಜ್ ಸಚಿವರು ತೀರ್ಮಾನ ಕೈಗೊಳ್ಳಬೇಕಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಗ್ರಾಮ ಪಂಚಾಯಿತಿಗಳು ಒಟ್ಟು 1633 ಕೋಟಿ ರೂ. ತೆರಿಗೆ ಸಂಗ್ರಹ ಹೊಂದಿದ್ದು, ಈವರೆಗೆ 863 ಕೋಟಿ ರೂ. ಸಂಗ್ರಹವಾಗಿದೆ. ಕಳೆದ ವರ್ಷ 767 ಕೋಟಿ ರೂ. ಸಂಗ್ರಹವಾಗಿದ್ದುದು ಈವರೆಗೆ ಅತಿ ದೊಡ್ಡ ಮೊತ್ತದ ತೆರಿಗೆ ಆದಾಯವೆನಿಸಿತ್ತು. ಈ ಬಾರಿ ಮೂರು ತಿಂಗಳು ಬಾಕಿಯಿರುವಂತೆಯೇ ದಾಖಲೆ ಪ್ರಮಾಣದ ತೆರಿಗೆ ಸಂಗ್ರಹವಾಗಿದ್ದು, ವಾರ್ಷಿಕ ಗುರಿ ತಲುಪಲು ಪ್ರಯತ್ನಿಸಲಾಗುವುದು ಎನ್ನುತ್ತಾರೆ ಸಚಿವ ಸಚಿವ ಪ್ರಿಯಾಂಕ್ ಖರ್ಗೆ
0 Comments