*ಬೆಂಗಳೂರು:* 2023-24ರ ಅವಧಿಯಲ್ಲಿ ನಮ್ಮದು ಒಟ್ಟು ಸಾಲ 90,280 ಕೋಟಿ ರೂ. ಇತ್ತು. 2024-25ರಲ್ಲಿ 1.4 ಲಕ್ಷ ಕೋಟಿ ಸಾಲ ಮಾಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ನಮ್ಮದು ಸಾಲದ ಪ್ರಮಾಣ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ವಿಧಾನ ಪರಿಷತ್ನಲ್ಲಿ ಬಿಜೆಪಿ ಸದಸ್ಯ ತಿಪ್ಪೇಸ್ವಾಮಿ ಪ್ರಶ್ನೆಗೆ ಸಿಎಂ ಅಂಕಿ ಅಂಶ ಸಮೇತ ಉತ್ತರಿಸಿದರು. ಯಾವುದೇ ಸರ್ಕಾರ ತನ್ನ ಕೆಲಸಗಳಿಗೆ ಹಣ ಖರ್ಚು ಮಾಡಲು ಸಾಲ ಮಾಡಬೇಕಾಗುತ್ತದೆ. ಸಾಮರ್ಥ್ಯ ನೋಡಿಕೊಂಡು ಸಾಲ ಮಾಡಬೇಕು. ಎಷ್ಟು ಸಾಲ ಕೊಡಬೇಕು ಅಂತ ಕೇಂದ್ರ ಸರ್ಕಾರ ನಿಗದಿ ಮಾಡುತ್ತದೆ. ಅದರ ಪ್ರಕಾರ ನಾವು ಸಾಲ ಪಡೆಯುತ್ತೇವೆ, ಸಾಲದ ಮಿತಿ ಕೊಟ್ಟಷ್ಟು ಸಾಲ ಪಡೆದಿದ್ದೇವೆ. ನಿಯಮದ ಪ್ರಕಾರ 3 ಮಾನದಂಡ ನಿಗದಿಯಾಗಿದೆ. ನಮ್ಮಲ್ಲಿ ವಿತ್ತೀಯ ಕೊರತೆಯು 2024-25ರಲ್ಲಿ 2.9% ಇದೆ, 2023-24ರಲ್ಲಿ 2.6% ಇತ್ತು ಎಂದು ತಿಳಿಸಿದರು. 2023-24 ರಲ್ಲಿ ನಮ್ಮದು ಒಟ್ಟು ಸಾಲ 90,280 ಕೋಟಿ ರೂ. ಇತ್ತು. 2024-25ರಲ್ಲಿ 1.4 ಲಕ್ಷ ಕೋಟಿ ರೂ. ಸಾಲ ಮಾಡಿದ್ದೇವೆ. ಆಂಧ್ರ, ಅಸ್ಸಾಂ, ಹಿಮಾಲಯ ಪ್ರದೇಶ, ಕೇರಳ, ಮಹಾರಾಷ್ಟ್ರ, ಮಧ್ಯ ಪ್ರದೇಶ, ತಮಿಳುನಾಡು ಸೇರಿ ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದರೆ ನಮ್ಮ ಸಾಲದ ಪ್ರಮಾಣ ಕಡಿಮೆ ಎಂದು ಸಿಎಂ ಹೇಳಿದರು. ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ. ಬಜೆಟ್ನಲ್ಲಿ ಒದಗಿಸಲಾಗಿದೆ. ಇದು ಹೆಚ್ಚಾಗಬಹುದು. ಹೆಚ್ಚಾದರೆ ಪೂರಕ ಬಜೆಟ್ನಲ್ಲಿ ಸೇರಿಸಿಕೊಳ್ತೀವಿ. ಗ್ಯಾರಂಟಿಯಿಂದ ರಾಜ್ಯದ ಬೊಕ್ಕಸ ಖಾಲಿ ಆಯ್ತು ಅಂತ ವಿಪಕ್ಷಗಳು ಆರೋಪ ಮಾಡುತ್ತಿವೆ. ಇದರಲ್ಲಿ ಯಾವುದೇ ಹುರುಳಿಲ್ಲ. ಅಭಿವೃದ್ಧಿಗೆ ಹಣ ಇದೆ, ರಾಜ್ಯದಲ್ಲಿ ಈ ವರ್ಷ 3.71 ಲಕ್ಷ ಕೋಟಿ ರೂ. ಗಾತ್ರದ ಬಜೆಟ್ ಮಂಡನೆ ಆಗಿದೆ. ಇದರಲ್ಲಿ 1.20 ಲಕ್ಷ ಕೋಟಿ ರೂ. ಅಭಿವೃದ್ಧಿಗೆ ಬಳಕೆ ಮಾಡ್ತಿದ್ದೇವೆ. ಇನ್ನೂ ಈ ಬಾರಿ 14 ಸಾವಿರ ಕೋಟಿ ರೂ. ವಿತ್ತೀಯ ಕೊರತೆ ಆಗಿದ್ದು, ಅನಗತ್ಯ ಖರ್ಚಿಗೆ ಕಡಿವಾಣ ಹಾಕಿ, ಸರಿ ದೂಗಿಸುತ್ತೇವೆ ಎಂದು ಸಿಎಂ ವಿವರಿಸಿದರು.
0 Comments